ಬೀದಿ ವ್ಯಾಪಾರಿಗಳ ಬಳಿ ಎನ್ನನಾದರೂ ಖರೀದಿಸಲು ಹೋಗುವಾಗ , ನಮ್ಮಲ್ಲಿ ಒಂದು ನಂಬಿಕೆ ಇದೆ. ಚೆನ್ನಾಗಿ ವ್ಯವಹರಿಸಿ , ಜಗಳವಾದರೂ ಆಡಿ , ಕಡಿಮೆ ಬೆಲೆಗೆ ಖರೀದಿಸಿದರೆ ನಾವು ಬುದ್ದಿವಂತರು ಹಾಗು ಚುರುಕು ಎಂದು ಕರೆಸಿಕೊಳ್ಳಲು ಸಮರ್ಥರು ಎಂದು . ಇದನ್ನು ಸಾಧಿಸುವ ಸಲುವಾಗಿ , ಅಲ್ಲಿ ನಡೆಯುವ ನಾಟಕೀಯ ಬೆಳವಣಿಗೆಗಳಲ್ಲಿ , ಅತ್ಯಂತ ಸುಂದರವಾದ ದೃಶ್ಯವೆಂದರೆ ..ಅಂಗಡಿಯವನಿಗೆ ಬೇಡ ಎಂದು ಹೇಳಿ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಾ , ಆತ ನಮ್ಮನ್ನು ವಾಪಸ್ಸು ಕರೆಯಲಿ ಎಂಬ ಪ್ರಾರ್ಥನೆಯೊಂದಿಗೆ ದೂರ ಸಾಗುವುದು . ಅದೇ ಯಾವುದಾದರೂ ಐಶಾರಾಮಿ ಮಳಿಗೆಗಳಲ್ಲಿ ಖರೀದಿಸುವಾಗ , ಈ ಯಾವುದೇ ಆಲೋಚನೆಗಳು ನಮ್ಮನ್ನು ಕಾಡುವುದಿಲ್ಲ. ಬದಲಿಗೆ , ನಾಲ್ಕು ಜನ ನೋಡುವಾಗ ಹೆಚ್ಚಿನ ಬೆಲೆಕೊಟ್ಟು ಖರೀದಿಸಿ , ಎದೆ ಉಬ್ಬಿಸಿಕೊಂಡು ಏನೋ ಸಾಧನೆ ಮಾಡಿರುವವರ ಹಾಗೆ ಹೊರ ನಡೆಯುತ್ತೇವೆ . ಮಾನವರು ಎಂದು ಸಾರಿಕೊಂಡು ಅಲೆದಾಡುವ ಆತ್ಮಗಳು , ಆಲೋಚಿಸಬೇಕಾದ ವಿಚಾರವೊಂದಿದೆ . ನಮ್ಮ ಹತೋಟಿಯಲ್ಲಿಲ್ಲದ ಮಳೆಯನ್ನು ಅವಲಂಬಿಸಿ , ಪರಿಚಯವೇ ಇಲ್ಲದ ಪೇಟೆಗೆ ಬಂದು , ಆಗಾಗ ಅಳುತ್ತಿರುವ ತನ್ನ ಕಂದನನ್ನು ಸಂತೈಸಿ , ತರಕಾರಿ ಮಾರುತ್ತಿರುವವಳೊಂದಿಗೆ ಚರ್ಚೆಮಾಡಿ , ಜಗಳವಾಡಿ ನಾವು ಏನನ್ನು ಸಾಧಿಸುತ್ತಿದ್ದೇವೆ ?!